
ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ದೂರು ದಾಖಲು
ಬೆಂಗಳೂರು: ಬಜಾರ್, ಬೈ ಟೂ ಲವ್ ಚಿತ್ರದ ನಾಯಕನಟ ಧನ್ವೀರ್ ಗೌಡ, ಅಭಿಮಾನಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಪ್ಪಾರಪೇಟೆಯಲ್ಲಿ ಎನ್ಸಿಆರ್ ದಾಖಲಾಗಿದೆ.ನಿನ್ನೆ ರಾತ್ರಿ ಎಸ್.ಸಿ ರಸ್ತೆಯ ಅನುಪಮಾ ಥಿಯೇಟರ್ ಬಳಿ ಘಟನೆ ನಡೆದಿದ್ದು, ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬುವವರು ದೂರು ನೀಡಿದ್ದಾರೆ. ಸ್ನೇಹಿತನ ಜೊತೆ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ಚಂದ್ರಶೇಖರ್, ನಟ ಧನ್ವೀರ್ ಕಂಡು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ.
ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ಬೇಡ ಬಿಡು ನಾಳೆ ಧೃವ ಸರ್ಜಾ ಜೊತೆ ಫೋಟೋ ತೆಗೆಸಿಕೊಡ್ತೀನಿ ಎಂದು ಹೇಳಿ ದ್ದಾರೆ.ಇದನ್ನು ಕೇಳಿಸಿಕೊಂಡ ಧನ್ವೀರ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬೌನ್ಸರ್ಸ್ ಜೊತೆ ಸೇರಿ ಕೂಡಿ ಹಾಕಿ ಥಳಿಸಿರುವ ಆರೋಪ ಕೇಳಿ ಬಂದಿದೆ. ಸದ್ಯ ಉಪ್ಪಾರಪೇಟೆ ಠಾಣೆಗೆ ಹಲ್ಲೆಗೊಳಗಾದ ಚಂದ್ರಶೇಖರ್ ದೂರು ನೀಡಿದ್ದು, ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಬೈ ಟೂ ಲವ್ ಚಿತ್ರ ಇಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗಿದೆ.