
ಗುರೂಜಿ ಹತ್ಯೆಮಾಡಿದ ಹಂತಕರನ್ನು ಬೆನ್ನತ್ತಿ ಹಿಡಿದ ಪೊಲೀಸರು
ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೈದು ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಹಂತಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಂತಕರಾದ ಕಲಘಟಗಿ ತಾಲೂಕ ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ, ಮಂಜುನಾಥ ಮರೇವಾಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಕಾರಿನಲ್ಲಿ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತನಿಖಾ ತಂಡವು ಇಬ್ಬರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದಲ್ಲದೆ ಚಂದ್ರಶೇಖರ ಗುರೂಜಿಯವರ ಕೊಲೆಗೆ ಸಂಬಂಧಿಸಿದಂತೆ ಗೋಕುಲ್ ರಸ್ತೆಯ ಗುರೂಜಿ ಅಪಾರ್ಟ್ಮೆಂಟ್ ನಲ್ಲಿ ಆರೋಪಿ ಮಹಾಂತೇಶ ಶಿರೂರ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಗುರೂಜಿಯ ಆಪ್ತ ಮಹಾಂತೇಶ ಶಿರೂರ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರಿಂದ ತೀವ್ರ ವಿಚಾರಣೆ ನಡೆಸಿದ್ದಾರೆ.
ಗುರೂಜಿ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಗೋಕುಲ ರಸ್ತೆ ಗುರೂಜಿ ಅಪಾರ್ಟ್ಮೆಂಟ್ನಲ್ಲೇ ಮಹಾಂತೇಶ ಶಿರೂರು 308 ರಲ್ಲಿ ವಾಸವಾಗಿದ್ದರು. ಇಂದು ಮಧ್ಯಾಹ್ನ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಹಂತಕರು ಚಂದ್ರಶೇಖರ ಗುರೂಜಿಯನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದರು. ಆರೋಪಿಗಳ ಬಂಧನಕ್ಕೆ 5 ವಿಶೇಷ ತಂಡವನ್ನು ರಚಿಸಲಾಗಿತ್ತು.