
NDA ಅಭ್ಯರ್ಥಿ ದ್ರೌಪದಿ ಮುರ್ಮು ರಾಜ್ಯಕ್ಕೆ ಭೇಟಿ: ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯಲ್ಲಿ ಭಾಗಿ AIN AdminBy AIN Admin
ಬೆಂಗಳೂರು: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಜ್ಯ ಬಿಜೆಪಿ ಶಾಸಕರು ಮತ್ತು ಸಂಸದರ ಬೆಂಬಲ ಕೋರಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಎನ್ಡಿಎ ಮತ್ತು ವಿವಿಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಭಾರತೀಯ ಜನತಾ ಪಕ್ಷದ ಶಾಸಕರ ಹಾಗೂ ಸಂಸದರ ಸಭೆಯಲ್ಲಿ ಭಾಗಿಯಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ವಹಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,
ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ , ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ ವಿ ಸದಾನಂದ ಗೌಡ ಮತ್ತು ಇತರರು ಭಾಗವಹಿಸಿದ್ದರು. ರಾಜ್ಯ ಬಿಜೆಪಿ ವತಿಯಿಂದ ಕೃಷ್ಣನ ವಿಗ್ರಹ ನೀಡಿ ರಾಜ್ಯದ ಸಂಪ್ರದಾಯದಂತೆ ಪೇಟ ತೊಡಿಸಿ ಮುರ್ಮು ಅವರನ್ನು ಗೌರವಿಸಲಾಯಿತು. ನಂತರ ಅವರನ್ನು ಅಭಿನಂದಿಸಿ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ರಾಜ್ಯ ಬಿಜೆಪಿ ಅಭಿನಂದನೆ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು ಪಕ್ಷ ನೀಡಿದ ಜವಾಬ್ದಾರಿ ಸ್ಮರಿಸಿದರು. ಈಗ ನೀಡುತ್ತಿರುವ ಹೊಸ ಜವಾಬ್ದಾರಿಗೆ ಬೆಂಬಲ ನೀಡುವಂತೆ ರಾಜ್ಯದ ಸಂಸದರು, ಶಾಸಕರಿಗೆ ಮನವಿ ಮಾಡಿದರು.