
ಪ್ರಧಾನಿಗೆ ಗೌರವ ಸೂಚಿಸದ ರಾಜ್ಯ ಯಾರಿಗೂ ಮಾದರಿಯಾಗಲ್ಲ: ಕೇಂದ್ರ ಸಚಿವೆ ಸ್ಮೃತಿ ಇರಾನಿ
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಾಗಿ ಹೈದರಾಬಾದ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಬಾರದಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದ್ದು ಡಿಕ್ಟೇಟರ್ ಎಂದು ಉದ್ಘರಿಸಿದ್ದಾರೆ.
ಮೋದಿ ಸ್ವಾಗತಕ್ಕೆ ಬಾರದೆ ಪ್ರಧಾನಿಗೆ ಅಗೌರವ ತೋರಿಸಿದ್ದಾರೆ. ಕೆ.ಚಂದ್ರಶೇಖರ್ ರಾವ್ ಸಾಂವಿಧಾನಿಕ ಮಾತ್ರವಲ್ಲದೆ ಸಾಂಸ್ಕೃತಿಕ ಸಂಪ್ರದಾಯಗಳನ್ನೂ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಹೈದರಾಬಾದ್ ಗೆ ಆಗಮಿಸಿ ಪ್ರಚಾರ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥರು ಪ್ರಧಾನಿ ಮೋದಿಯನ್ನು “ಸೇಲ್ಸ್ಮ್ಯಾನ್” ಎಂದು ಕರೆದಿದ್ದರು. ಪ್ರಧಾನಿ ಮೋದಿಯನ್ನು ಸ್ವಾಗತಿಸದೇ ಇದ್ದರೂ, ಕೆಲವು ಗಂಟೆಗಳ ಮೊದಲು ಅವರು ಯಶವಂತ್ ಸಿನ್ಹಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.
ರಾಜಕಾರಣವು ಕೆಸಿಆರ್ ಕುಟುಂಬಕ್ಕೆ ಸರ್ಕಸ್ ಆಗಿರಬಹುದು. ನಮಗೆ ಅದು ರಾಷ್ಟ್ರೀಯ ನೀತಿಯ ಮಾಧ್ಯಮ. ತೆಲಂಗಾಣ ಇಂದು ವಂಶಪಾರಂಪರ್ಯ ರಾಜಕಾರಣ ನಡೆಸುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಅವರ ನಡೆ ಸರ್ಕಾರಕ್ಕೆ ಮಾಡಿರುವ ಅವಮಾನ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಕ್ರೋಶ ಹೊರ ಹಾಕಿದ್ದಾರೆ.
ತೆಲಂಗಾಣದ ಅಭಿವೃದ್ಧಿ ಮಾದರಿಯನ್ನು ದೇಶದ ಇತರೆ ರಾಜ್ಯಗಳು ಅನುಸರಿಸಬೇಕು ಎಂಬ ಕೆಸಿಆರ್ ಹೇಳಿಕೆಯನ್ನು ಪ್ರಶ್ನಿಸಿದ ಸ್ಮೃತಿ ಇರಾನಿ, ಪ್ರಧಾನಿಗೇ ಗೌರವ ಸೂಚಿಸದ ರಾಜ್ಯ ಯಾರಿಗೂ ಮಾದರಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.